Friday, August 21, 2009

ಹೊರಳಿ ಹೋದ ಕ್ಷಣಗಳು
-ಶ್ರೀ ಶ್ರೀ

ಓ ಚೆದುರಿದ ಅಕ್ಷರಗಳೇ! ಕರಗಿಹೋದ ಕ್ಷಣಗಳೇ! ಪ್ರವಹಿಸಿರಿ ನನ್ನ ಲೇಖನಿಯಲ್ಲಿ ಶಾಯಿಯಂತೆ!

ಸರಿ ಸತ್ತುಹೋದೆ, ನನಗೆ 1990 ರಲ್ಲಿ ಸಾಯಬೇಕೆಂದಿದೆ. ಬಹುಶಃ ವಿಮಾನ ಪ್ರಮಾದದಲ್ಲಿ, ಇಲ್ಲ ಜಲಗಂಡದಲ್ಲಾ? ಅದೋ ಇದೋ ಅಲ್ಲದಿದ್ದರೆ ನೆಲದ ಮೇಲೇ ಕಾಲಧರ್ಮ.

ನನ್ನ ಶವದ ಸುತ್ತಲೂ ಬಹಳ ಜನ ಸೇರಿ ಅಳುತ್ತಿದ್ದಾರೆ. 'ಯಾಕಳುತ್ತೀರಿ, ಈಗೇನಾಗಿಹೋಯ್ತು?' ಎಂದು ನಾನೆಷ್ಟು ಧಾರಾಪಾತವಾಗಿ ಅರಚುತ್ತಿದ್ದರೂ ಯಾರಿಗೂ ನನ್ನ ಮಾತುಗಳು ಕೇಳಿಸವು.'ಅನಂತರದ ಕಾರ್ಯಕ್ರಮದ ಕುರಿತು ಆಲೋಚಿಸಿ'ರೆಂದರ್ಯಾರೋ! ದಹನ ಸಂಸ್ಕಾರ ಅಜೆಂಡಾದೊಳಗೆ ಬಂತು. ಅದೇ ಸಾಧ್ಯವಿಲ್ಲಾಂತೀನಿ. ಮತಕ್ಕೆ ಸಂಬಂಧಿಸಿದ ಯಾವ ವಿಧವಾದ ಕರ್ಮಕಾಂಡಕ್ಕೆ ನನ್ನ (ಸಜೀವ ಯಾ ನಿರ್ಜೀವ) ದೇಹವನ್ನು ಅಂಕಿತ ಮಾಡುವುದನ್ನು ನಾನು ಸುತರಾಂ ಅಂಗೀಕರಿಸೆನು. ಆಫ಼್ಟರ್ ಆಲ್ ಇಟ್ ಈಸ್ ಮೈ ಕಾರ್ಪ್ಸ್, ಇಸ್ನ್ಟ್ ಇಟ್? ಆರ್ ಇಸ್ ಇಟ್?

ಸುತ್ತಲೂ ಸೇರಿದವರಲ್ಲಿ ಕೆಲವರಿಗೆ ನಾನೊಮ್ಮೆ ಬರೆದ ಮರಣಶಾಸನ ನೆನಪಿಗೆ ಬಂದಿತು. ಅದರಲ್ಲಿ ನಾನು 'ನಾನು ಸತ್ತುಹೋದ ನಂತರ ನಡೆಯಬೇಕಾದ ಮೊದಲ ಕೆಲಸ ನನ್ನ ದೇಹವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕೊಡುವುದು' ಎಂದು ಬರೆದಿದ್ದೆ. ಆ ನಂತರ ನಡೆಯಬೇಕಾದ್ದು ಅಲ್ಲಿರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಲ್ಲಿ ನಿರೀಶ್ವರವಾದಿಗಳ ಅಧ್ವರ್ಯದಲ್ಲಿ ನಡೆಯಲೆಂದು ನನ್ನ ಆಕಾಂಕ್ಷೆ.

ಅತ್ತು, ಅತ್ತು ನಿಲ್ಲಿಸಿದವರು ನಿಲ್ಲಿಸಿದರೂ, ಅಳುತ್ತಿರುವವರು ಇನ್ನೂ ಅಳುತ್ತಿದ್ದಾರೆ. ಅಳಲಿಬಿಡಿ ನನಗೇನೂ ಅಭ್ಯಂತರವಿಲ್ಲ.

ಪತ್ರಿಕೆಯವರಿಗೆ ಬೇಕಾದಷ್ಟು ಸುದ್ದಿ. ಏನೇನೋ ಬರೆಯುತ್ತಿದ್ದಾರೆ. ಬರೆದುಕೊಳ್ಳಲಿಬಿಡಿ ನನ್ನ ಅಭ್ಯಂತರವಿಲ್ಲ.

ವಿರಸಂ ನವರು ನನ್ನ ಮೆರವಣಿಗೆಯಾಗಬೇಕೆಂದರು. ನನ್ನ ಅಭ್ಯಂತರವಿಲ್ಲ. ನನ್ನ ಶವದ ಮೇಲೆ ಕೆಂಪು ಬಾವುಟ ಹೊದಿಸುವುದನ್ನು ಮರೆಯದಿರಿ ಎಂದು ಪದೇಪದೇ ಅಲವತ್ತುಕೊಂಡೆ.

ನನ್ನ ಮಗನೇ ಬಂದು ಅವನ ಕೈಯಾರೆ ನನ್ನ ಚಿತೆಗೆ ಅಗ್ನಿಸ್ಪರ್ಷ ಮಾಡುವೆನೆಂದನು. ಇದು ಅವನಿಗೇ ಬಂದ ಆಲೋಚನೆಯಾಗಿರದು. ಯಾರೋ ಹೇಳಿಕೊಟ್ಟ ಟ್ಯೂಷನ್ - ಅದೇ ಸಾಧ್ಯವಿಲ್ಲವೆನ್ನುತ್ತೇನೆ.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)

No comments:

Post a Comment