Showing posts with label ಅನಂತಮ್. Show all posts
Showing posts with label ಅನಂತಮ್. Show all posts

Friday, August 21, 2009

ವಿಶಾಖಪಟ್ನಂ ಜ್ಙಾಪಕಗಳು

ವಿಶಾಖಪಟ್ನಮ್ ಯಾವಾಗ ಹುಟ್ಟಿತೋ ನಾನರಿಯೆನಾದರೂ ವಿಶಾಖಪಟ್ನದಲ್ಲಿ 1910ನೇ ಸಂವತ್ಸರದಲ್ಲಿ ನಾನು ಜನ್ಮತಾಳಿದೆ. ಅಂದಿನಿಂದ ನಾನೂ ವಿಶಾಖಪಟ್ನವೂ ಜೊತೆಯಾಗೆ ಬೆಳೆಯುತ್ತ ಬಂದಿದ್ದೇವೆ. ಮೊನ್ನೆ 'ಜಲ ಉಷ'() (ಎಂತ ವಿಕಾರವಾದ ಹೆಸರು!) ಸಮುದ್ರ ಪ್ರವೇಶ ಮಾಡಿದಾಗ ನಾನು ವಿಶಾಖಪಟ್ನದಲ್ಲಿ ಇರಲಿಲ್ಲವಾದರು ಆದಿನ ನಾನು ಕೂಡ ಆಧ್ಯಾತ್ಮಿಕವಾಗಿ ಒಂದು ಸಮುದ್ರ ಆರಂಭ ಮಾಡಿದೆ.

ಇದು ನಿಜ! ನನ್ನ ಕವಿತ್ವಕ್ಕೆ ಸಮುದ್ರವೇ ಆವೇಶ. ಸಮೀಪದಲ್ಲಿ ಸಮುದ್ರವಿಲ್ಲದ ಸ್ಥಳ ನನ್ನನ್ನು ಕೊಲ್ಲುತ್ತದೆ. ಡೆಲ್ಲಿಯಲ್ಲು, ಲಕ್ನೋನಲ್ಲು ಎಷ್ಟೋ ತಿಂಗಳುಗಳು ನಾನು ಜೀವಿಸಿದೆ. ಆದರೆ ಒಂದು ಗೀತೆಯೂ ಊದಲಾರದೆ ಹೋದೆ. ದಿನವೂ ಹೋಗದಿದ್ದರೂ ಹತ್ತಿರದಲ್ಲೆಲ್ಲೋ ಮಹಾಸಮುದ್ರವಿದೆಯೆಂದರೆ ಸಾಕು, ಖರ್ಚು ಮಾಡದಿದ್ದರೂ ಬ್ಯಾಂಕಿನಲ್ಲಿ ಹತ್ತು ಸಾವಿರ ಠೇವಣಿಯಿಟ್ಟಷ್ಟು ಧೈರ್ಯ!

ಮಿತ್ರ ಪಾಲೂರಿ ಸೀತಾಪತಿರಾವು() ಹೆಂಡತಿಗೆ ವಿಷವಿಟ್ಟು ಸಾಯಿಸಿದ್ದಕ್ಕೆ ಸೆಂಟ್ರಲ್ ಜೈಲಿನಲ್ಲಿ ಉರಿಗೆ ಹಾಕಿದರು. ಕೊನೆಯದಾಗಿ ಒಂದು ಸೀಜರ್ ಸಿಗರೇಟು ಕೇಳಿ ತರಿಸಿಕೊಂಡು ಸೇದಿ 'ಇನ್ನು ನಿಮ್ಮ ಕೆಲಸ ಮಾಡಿಕೊಳ್ಳಿ'ರೆಂದನಂತೆ ಆತ. ಎಷ್ಟೋ ನೂರು ಗ್ರಂಥಗಳನ್ನು ಓದಿದರೂ ಆಗದ ಅನುಭವವನ್ನ ಈ ಸಂನಿವೀಸ ಕೇಳಿದ ಕ್ಷಣದಲ್ಲಿ ಸಂಪಾದಿಸಿದೆ.

ನನ್ನ ವಿಶಾಖ ಸಂಸ್ಕೃತಿಯ ಪ್ರಧಾನರಸ ಬೀಭತ್ಸವೇ ಅನ್ನುವುದನ್ನು ಒಪ್ಪುತ್ತೇನೆ. ಆದರೆ ಅಭೌಮವಾದ ಮಹದಾನಂದ ಅನುಭವಿಸಿದ ಕ್ಷಣಗಳು ಕೂಡಾ ಅನೇಕ ಇವೆ. ರಾಳ್ಳತೋಟದಲ್ಲಿ ಕೆಲವು ಚಳಿಗಾಲದ ಪ್ರಾತಃಕಾಲಗಳು ಕುಸುಮಿಸುತ್ತಿರುವ ಗುಲಾಬಿ ಸಸಿಗಳ ನಡುವೆ ಕಳೆದುಹೋದವು. ಯಾರಾಡಕೊಂಡದ ಮೇಲೆ ಒಂಟಿಯಾಗಿ ನಿಂತು ಒಂದೊಂದು ದಿನ ಒಂದೊಂದು ಥರ ವಿಶಾಖಪಟ್ನವನ್ನು ನೋಡಿದೆ.

ಯಾವತ್ತಿಗಾದರೂ ನಾನೊಂದು ಹದಿನೈದು ಅಶ್ವಾಸಗಳ ಮಹಾಕಾವ್ಯವನ್ನು ಬರೆಯುತ್ತೇನೆ.

ಅದರ ಹೆಸರು 'ವಿಶಾಖಪಟ್ನಮ್'.

ನವೋದಯ ಪತ್ರಿಕೆ : 2-5-1948

ಟಿಪ್ಪಣಿ:
(೧) ವಿಶಾಖಪಟ್ನದಲ್ಲಿ ಭಾರತ ನೌಕಾನಿರ್ಮಾಣ ಕೇಂದ್ರ ನಿರ್ಮಿಸಿದ ಮೊದಲ ಹಡಗು ಜಲ ಉಷ 14-3-1948ರಂದು ಜಲಪ್ರವೇಶ ಮಾಡಿತು.
(೨) ಪಾಲೂರಿ ಸೀತಾಪತಿರಾವು ತಹಸೀಲ್ದಾರರ ಮಗ. ಮೆಡಿಕಲ್ ವಿದ್ಯಾರ್ಥಿ ಎಲ್.ಎಂ.ಪಿ. ಮೂರನೇ ವರ್ಷ ಓದುತ್ತಿದ್ದ. ಅನ್ನದಲ್ಲಿ ಪೊಟಾಸಿಯಂ ಸಯನೈಡ್ ಕಲೆಸಿ ಹೆಂಡತಿಯನ್ನು ಕೊಂದುಬಿಟ್ಟ.1928ರಲ್ಲಿ ಉರಿಶಿಕ್ಷೆ ವಿಧಿಸಿ, 1931ರಲ್ಲಿ ಉರಿಗೆ ಹಾಕಿದರು.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)
ಹೊರಳಿ ಹೋದ ಕ್ಷಣಗಳು
-ಶ್ರೀ ಶ್ರೀ

ಓ ಚೆದುರಿದ ಅಕ್ಷರಗಳೇ! ಕರಗಿಹೋದ ಕ್ಷಣಗಳೇ! ಪ್ರವಹಿಸಿರಿ ನನ್ನ ಲೇಖನಿಯಲ್ಲಿ ಶಾಯಿಯಂತೆ!

ಸರಿ ಸತ್ತುಹೋದೆ, ನನಗೆ 1990 ರಲ್ಲಿ ಸಾಯಬೇಕೆಂದಿದೆ. ಬಹುಶಃ ವಿಮಾನ ಪ್ರಮಾದದಲ್ಲಿ, ಇಲ್ಲ ಜಲಗಂಡದಲ್ಲಾ? ಅದೋ ಇದೋ ಅಲ್ಲದಿದ್ದರೆ ನೆಲದ ಮೇಲೇ ಕಾಲಧರ್ಮ.

ನನ್ನ ಶವದ ಸುತ್ತಲೂ ಬಹಳ ಜನ ಸೇರಿ ಅಳುತ್ತಿದ್ದಾರೆ. 'ಯಾಕಳುತ್ತೀರಿ, ಈಗೇನಾಗಿಹೋಯ್ತು?' ಎಂದು ನಾನೆಷ್ಟು ಧಾರಾಪಾತವಾಗಿ ಅರಚುತ್ತಿದ್ದರೂ ಯಾರಿಗೂ ನನ್ನ ಮಾತುಗಳು ಕೇಳಿಸವು.'ಅನಂತರದ ಕಾರ್ಯಕ್ರಮದ ಕುರಿತು ಆಲೋಚಿಸಿ'ರೆಂದರ್ಯಾರೋ! ದಹನ ಸಂಸ್ಕಾರ ಅಜೆಂಡಾದೊಳಗೆ ಬಂತು. ಅದೇ ಸಾಧ್ಯವಿಲ್ಲಾಂತೀನಿ. ಮತಕ್ಕೆ ಸಂಬಂಧಿಸಿದ ಯಾವ ವಿಧವಾದ ಕರ್ಮಕಾಂಡಕ್ಕೆ ನನ್ನ (ಸಜೀವ ಯಾ ನಿರ್ಜೀವ) ದೇಹವನ್ನು ಅಂಕಿತ ಮಾಡುವುದನ್ನು ನಾನು ಸುತರಾಂ ಅಂಗೀಕರಿಸೆನು. ಆಫ಼್ಟರ್ ಆಲ್ ಇಟ್ ಈಸ್ ಮೈ ಕಾರ್ಪ್ಸ್, ಇಸ್ನ್ಟ್ ಇಟ್? ಆರ್ ಇಸ್ ಇಟ್?

ಸುತ್ತಲೂ ಸೇರಿದವರಲ್ಲಿ ಕೆಲವರಿಗೆ ನಾನೊಮ್ಮೆ ಬರೆದ ಮರಣಶಾಸನ ನೆನಪಿಗೆ ಬಂದಿತು. ಅದರಲ್ಲಿ ನಾನು 'ನಾನು ಸತ್ತುಹೋದ ನಂತರ ನಡೆಯಬೇಕಾದ ಮೊದಲ ಕೆಲಸ ನನ್ನ ದೇಹವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಕೊಡುವುದು' ಎಂದು ಬರೆದಿದ್ದೆ. ಆ ನಂತರ ನಡೆಯಬೇಕಾದ್ದು ಅಲ್ಲಿರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಲ್ಲಿ ನಿರೀಶ್ವರವಾದಿಗಳ ಅಧ್ವರ್ಯದಲ್ಲಿ ನಡೆಯಲೆಂದು ನನ್ನ ಆಕಾಂಕ್ಷೆ.

ಅತ್ತು, ಅತ್ತು ನಿಲ್ಲಿಸಿದವರು ನಿಲ್ಲಿಸಿದರೂ, ಅಳುತ್ತಿರುವವರು ಇನ್ನೂ ಅಳುತ್ತಿದ್ದಾರೆ. ಅಳಲಿಬಿಡಿ ನನಗೇನೂ ಅಭ್ಯಂತರವಿಲ್ಲ.

ಪತ್ರಿಕೆಯವರಿಗೆ ಬೇಕಾದಷ್ಟು ಸುದ್ದಿ. ಏನೇನೋ ಬರೆಯುತ್ತಿದ್ದಾರೆ. ಬರೆದುಕೊಳ್ಳಲಿಬಿಡಿ ನನ್ನ ಅಭ್ಯಂತರವಿಲ್ಲ.

ವಿರಸಂ ನವರು ನನ್ನ ಮೆರವಣಿಗೆಯಾಗಬೇಕೆಂದರು. ನನ್ನ ಅಭ್ಯಂತರವಿಲ್ಲ. ನನ್ನ ಶವದ ಮೇಲೆ ಕೆಂಪು ಬಾವುಟ ಹೊದಿಸುವುದನ್ನು ಮರೆಯದಿರಿ ಎಂದು ಪದೇಪದೇ ಅಲವತ್ತುಕೊಂಡೆ.

ನನ್ನ ಮಗನೇ ಬಂದು ಅವನ ಕೈಯಾರೆ ನನ್ನ ಚಿತೆಗೆ ಅಗ್ನಿಸ್ಪರ್ಷ ಮಾಡುವೆನೆಂದನು. ಇದು ಅವನಿಗೇ ಬಂದ ಆಲೋಚನೆಯಾಗಿರದು. ಯಾರೋ ಹೇಳಿಕೊಟ್ಟ ಟ್ಯೂಷನ್ - ಅದೇ ಸಾಧ್ಯವಿಲ್ಲವೆನ್ನುತ್ತೇನೆ.

(ಶ್ರೀ ಶ್ರೀ ಯವರ ಆತ್ಮಚರಿತ್ರಾತ್ಮಕ ಕಾದಂಬರಿ 'ಅನಂತಂ'ನಿಂದ.)