Monday, April 7, 2014

:ಸ್ವಗತ:


ಸುಖಕ್ಕಿದ್ದರೆ ಸಾಕು ಮಾರಾಯ ನಿನ್ನ ದುಃಖಕ್ಕೆ ಏನ ಮಾಡಲಿ ಹೇಳು?
ಅಲವತ್ತು ಹೊರೆಹೊತ್ತು ಕಿರಿಕಿರಿಯ ಕರೆ ಮಾಡಿ
ಪರಚಿ ರಂಪ ಮಾಡಿ ಸಿಗುವುದಾದರೂ ಏನು?
ನಿನ್ನ ಕಷ್ಟಕ್ಕೆ ನಾನೇನು ಹೊಣೆಹೊರಲಿ?
ಲಾಭವಿಲ್ಲದೆ ವ್ಯಾಪಾರವಿಲ್ಲದಿರೆ ಮನಸುಗಳ ವ್ಯಾಪಾರ ಹೇಗೆ ಭಿನ್ನ?
ಹೇಳು ಚಿನ್ನ!

ನನ್ನಿಷ್ಟ ಹೀಗೆ ಇರುವುದಾದರೆ ಇರು ಬಿಡುವುದಾದರೆ ಬಿಡು
ಭಗವಂತ ಎಡಬಿಡದೆ ಕಾಯಲೊಲ್ಲ, ನಾನೆಷ್ಟರವಳು?
ಇರುವುದೇ ಹೀಗೆ ನೋಡು...
ನೋವಿನ ಮಾತು ಬೇಡ, ತಲೆನೋವು ತರಬೇಡ
ನಿನ್ನ ನೋವಿಗೆ ನಾನು ಕೊಡಲಿ ಏನ?
ನಿನ್ನ ತಲೆ ನಿನ್ನ ಕೈ!

ಮಾಡಿಟ್ಟ ಅಡುಗೆ ಇದ್ದಲ್ಲೇ ಇದೆ ನೋಡು ನಿನಗೆಷ್ಟು ಸೊಕ್ಕು?
ಬಂದು ಬಡಿಸಿದರಷ್ಟೆ ಕಂಡೀತೆ ಪ್ರೀತಿ? ತಿನಬಾರದೆ?
ಬಡಿವಾರ ಅನಕೋತಿ ಇದದ್ದು ಹೇಳಿದರೆ... ಪರಿ ಪರಿಯ ಹೇಳಿದರು ತಿಳಿಯಲೊಲ್ಲೇ?
ಪ್ರೀತಿ ಪ್ರೇಮದ ನಡುವೆ ಸ್ವಾರ್ಥವೆಲ್ಲಿದೆ ಹೇಳು.. ನಿನ್ನ ಪಾಡಿಗೆ ನೀನು ಇರಬಾರದೇ?
ನನ್ನ ಪಾಡಿಗೆ ನನ್ನ ಇರಲುಬಿಟ್ಟು?

ಎಂದೋ ನಡೆದದ್ದು ಇಂದು ಇರಬಹುದೇ ... ಉಟ್ಟ ಬಟ್ಟೆ ಸುಕ್ಕಾಗದಿದ್ದೀತೆ?
ಹೊಸ ಪ್ರೀತಿ ಹಳೆಯದಾಗದಿದ್ದೀತೆ?
ಹುಚ್ಚು ನಿನಗೆಲ್ಲೋ... ಮೊದಲ ದಿನದ ಇಬ್ಬನಿಯ ಹಾಗೇನೆ
ಇದ್ದ ಹಾಗೆಯೇ ಇರಲು ಸಾಧ್ಯವೇ ಹೇಳು ಅಷ್ಟು ದಿನದಿಂದ!

(ಶ್ರೀನಿವಾಸ ಪಶುಪತಿ, 2014)

No comments:

Post a Comment